ಪ್ರಬೋಧೋತ್ಸವ :- ಜಾತ್ರೆಯ ಮರುದಿನ ಅಂದರೆ 17-01-2016ರಂದು ಬೆಳಗ್ಗೆ ಗಂಟೆ 8-00 ಕ್ಕೆ ಶ್ರೀಗುರುನರಸಿಂಹ ಮತ್ತು ಶ್ರೀಲಕ್ಷ್ಮೀ ದೇವರನ್ನು ಶಯನದಿಂದ ಶಾಸ್ತ್ರೋಕ್ತವಾಗಿ ಏಳಿಸಿ ಧಾರ್ಮಿಕ ವಿಧಿ ವಿಧಾನಗಳಿಂದ ಪೂಜೆ ಮಾಡುತ್ತಾರೆ, ನಂತರ ಮಹಾಪೂಜೆ ಸವಾರಿ ನಡೆದು ಮಧ್ಯಾಹ್ನದ ಪೂಜಾ ವಿಧಾನಗಳು ಎಂದಿನಂತೆ ಪ್ರಾರಂಭಗೊಳ್ಳುತ್ತವೆ. ಸಂಜೆ 5-30ಕ್ಕೆ ಮಹಾಪೂಜೆ ನಂತರ ಉತ್ಸವ ಬಲಿ ನಡೆದು, ಶಾಸ್ರೋಕ್ತವಾಗಿ ಓಲಗಮಂಟಪದಲ್ಲಿ ಶ್ರೀದೇವರಿಗೆ ಓಕಳಿ ಸೇವೆ ನಡೆಯುತ್ತದೆ ನಂತರ ಶ್ರೀದೇವರು ಬೆಳ್ಳಿರಥದಲ್ಲಿ ಕೋಟ ಶ್ರೀ ಹಂದೆ ಮಹಾಗಣಪತಿ ದೇವಸ್ಥಾನಕ್ಕೆ ಹೋಗಿ ಅಲ್ಲಿಯ ಕೆರೆಯಲ್ಲಿ ಅವಭ್ರಥ ಸ್ನಾನವನ್ನು ಮಾಡಲಾಗುತ್ತದೆ. ಇದಕ್ಕೂ ಮುಂಚೆ ವರುಣ ಹೋಮ ಇತ್ಯಾದಿ ಸಂಬಂಧಿಸಿದ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತದೆ. ಅವಭ್ರಥ ಸ್ನಾನದ ನಂತರ ಹಂದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ತೆರಳಿ ಓಲಗ ಮಂಟಪದಲ್ಲಿ ಕೂಡಿಸಿ ಶ್ರೀ ವಿಷ್ಣಮೂರ್ತಿ ದೇವರು ಮತ್ತು ಶ್ರೀಗಣಪತಿ ದೇವರಿಗೆ ಮಹಾಪೂಜೆ ಮಾಡಿ ಶ್ರೀ ಗುರುನರಸಿಂಹ ದೇವರಿಗೆ ಅಷ್ಟಾವಧಾನ ಸೇವೆ ನಡೆಯುತ್ತದೆ. ನಂತರ ಅಲ್ಲಿಂದ ಹೊರಟು ಶ್ರೀ ಉರಾಳ ಕುಟುಂಬದ ಕಟ್ಟೆ, ಶ್ರೀ ಉಪಾಧ್ಯಾಯರು ಗಣೇಶ ಕ್ರಪ ಕಟ್ಟೆ, ಶ್ರೀ ಎಳನೀರು ಮಠ ಚಿತ್ರಪಾಡಿಯ ಕಟ್ಟೆ, ಶ್ರೀಆಂಜನೇಯ ದೇವಸ್ಥಾನ ಮತ್ತು ರಿಕ್ಷಾ ಸ್ಟ್ಯಾಂಡ್ ಕಟ್ಟೆ ಪೂರೈಸಿ ಶ್ರೀದೇವಳಕ್ಕೆ ಹಿಂದುರುಗಿ ಓಲಗ ಮಂಟಪದಲ್ಲಿ ಕೂಡಿಸಲಾಗುತ್ತದೆ. ನಂತರ ಮಹೂರ್ತ ಬಲಿ ದಿನದಂದು ಪ್ರಾರಂಭಿಸಿದ ಹೋಮದ ಪೂರ್ಣಾಹುತಿ ಮತ್ತು ಸಂಬಂಧಿಸಿದ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿ ಧ್ವಜವನ್ನು ಇಳಿಸಿ ಶ್ರೀದೇವರನ್ನು ಒಳಗೆ ಕರೆದುಕೊಂಡು ಹೋಗಿ ಮಹಾಮಂಗಳಾರತಿಯನ್ನು ಮಾಡಿ ಜಾತ್ರೆಯನ್ನು ಸಂಪನ್ನಗೊಳಿಸಲಾಯಿತು. ನಂತರ ಪ್ರಸಾದ ವಿತರಣೆ ಮತ್ತು ಮಂತ್ರಾಕ್ಷತೆಯನ್ನು ಮಾಡಲಾಯಿತು, ದಿನಾಂಕ 18-01-2016 ರಂದು ಬೆಳಗ್ಗೆ ಗಣಹೋಮ, ಸಂಪ್ರೋಕ್ಷಣೆ ಮಾಡಲಾಯಿತು
ಶ್ರೀದೇವರ ಉತ್ಸವ ಮೆರವಣಿಗೆಯು ಮೊದಲು ರಥದಲ್ಲಿ ಅವಭ್ರಥ ಸ್ನಾನಕ್ಕೆ ಸಾಗುತ್ತಿದ್ದು ನಂತರ ಕಾರಾಣಾಂತರಗಳಿಂದ ಅಂದರೆ ಸುಮಾರು 16 ವರ್ಷಗಳಿಂದ ಬೆಳ್ಳಿ ಪಲ್ಲಕಿಯಲ್ಲಿ ಸಾಗುತ್ತಿತ್ತು. ಈ ವರ್ಷವು ಬೆಳ್ಳಿರಥದಲ್ಲಿ ಉತ್ಸವ ಮೆರವಣಿಗೆಯು ಸಾಗುವುದರ ಮೂಲಕ ದಾಖಲೆಯ ಇತಿಹಾಸ ನಿರ್ಮಾಣವಾಯಿತು. ಹಾಗೂ ಈ ಬದಲಾವಣೆಯು ಭಕ್ತಾದಿಗಳ ಮೆಚ್ಚುಗೆಗೆ ಪಾತ್ರವಾಯಿತು.
ಶ್ರೀಗುರುನರಸಿಂಹ ಬಯಲು ರಂಗಮಂದಿರದಲ್ಲಿ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರ ಸಹಭಾಗಿತ್ವದೊಂದಿಗೆ ನ್ರತ್ಯ ವಸಂತ ನಾಟ್ಯಾಲಯ ಕುಂದಾಪುರ ಇವರಿಂದ ಮನಮೋಹಕ ನ್ರತ್ಯ ಸಿಂಚನವನ್ನು ಏರ್ಪಡಿಸಲಾಗಿತ್ತು ಈ ಕಾರ್ಯಕ್ರಮವು ಚಂದವಾಗಿ ಮೂಡಿಬಂದಿದ್ದು ನೆರೆದಿದ್ದ ಭಕ್ತಾದಿಗಳ ಮತ್ತು ಪ್ರೇಕ್ಷಕರ ಮನಸೂರೆಗೊಂಡು ಮೆಚ್ಚುಗೆಗ ಪಾತ್ರವಾಯಿತು.